ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಹತ್ವದ ಅಪ್ಡೇಟ್ ಇಲ್ಲಿದೆ.
ಈಗಾಗಲೇ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮೌಲ್ಯಮಾಪನ ಕಾರ್ಯ ಭರದಿಂದ ಸಾಗುತ್ತಿದ್ದು, ಫಲಿತಾಂಶ ಪ್ರಕಟಣೆಯ ತಯಾರಿಯು ನಡೆಯುತ್ತಿದೆ.
ಹಾಗಾದರೆ, ಯಾವ ಪರೀಕ್ಷೆಯ ಫಲಿತಾಂಶ ಯಾವಾಗ ಬರಲಿದೆ? ಮೌಲ್ಯಮಾಪನ ಪ್ರಕ್ರಿಯೆ ಯಾವ ಹಂತದಲ್ಲಿದೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಪ್ರಿಲ್ 7ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ನಿರೀಕ್ಷೆ:
ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆದಿದ್ದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವು ಇದೇ ಏಪ್ರಿಲ್ 7 ರಂದು ಪ್ರಕಟವಾಗುವ ಸಾಧ್ಯತೆಗಳಿವೆ.
ರಾಜ್ಯಾದ್ಯಂತ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಅವರ ಕಾಯುವಿಕೆಗೆ ಇನ್ನೆರಡೇ ದಿನಗಳಲ್ಲಿ ತೆರೆಬೀಳಲಿದೆ. ಮಾರ್ಚ್ 20 ರಿಂದಲೇ ಆರಂಭವಾಗಿದ್ದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಈಗ ಬಹುತೇಕ ಪೂರ್ಣಗೊಂಡಿದೆ.
ಶಿಕ್ಷಣ ಇಲಾಖೆ ಶೀಘ್ರದಲ್ಲೇ ಅಧಿಕೃತ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಲಿದ್ದು, ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಏಪ್ರಿಲ್ 24ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ?:
ರಾಜ್ಯಾದ್ಯಂತ ಕುತೂಹಲ ಮೂಡಿಸಿದ್ದ ಎಸ್ಎಸ್ಎಲ್ಸಿ (10ನೇ ತರಗತಿ) ಪರೀಕ್ಷೆ-1 ಬುಧವಾರವಷ್ಟೇ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿ ಬರೋಬ್ಬರಿ 8.65 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಅದರಲ್ಲಿ ಸುಮಾರು 8.50 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 2 ರಿಂದ 3 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ನಾಳೆಯಿಂದಲೇ (ಏಪ್ರಿಲ್ 5) ಶುರುವಾಗಲಿದ್ದು, ಏಪ್ರಿಲ್ 20 ರವರೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದೆ.
ಮೌಲ್ಯಮಾಪನ ಮುಗಿದ ನಂತರ, ಏಪ್ರಿಲ್ 24 ರಂದು ಎಸ್ಎಸ್ಎಲ್ಸಿ ಪರೀಕ್ಷೆ-1 ರ ಫಲಿತಾಂಶವನ್ನು ಪ್ರಕಟಿಸಲು ಇಲಾಖೆ ಸಕಲ ಸಿದ್ಧತೆ ನಡೆಸಿದೆ.
2nd PUC SSLC Result 2026 Karnataka Link: karresults.nic.in
ಎಸ್ಎಸ್ಎಲ್ಸಿ ಪರೀಕ್ಷೆ-2ರ ವೇಳಾಪಟ್ಟಿ:
ಹೊಸ ನಿಯಮದ ಪ್ರಕಾರ, ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗದ ಅಥವಾ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ‘ಪರೀಕ್ಷೆ-2’ ಬರೆಯುವ ಅತ್ಯುತ್ತಮ ಅವಕಾಶವಿದೆ. ಈ ಪರೀಕ್ಷೆ-2 ಅನ್ನು ಮೇ 18 ರಿಂದ ಮೇ 25 ರವರೆಗೆ ನಡೆಸಲು ಮಂಡಳಿಯು ತೀರ್ಮಾನಿಸಿದೆ.
ಇದರ ಫಲಿತಾಂಶವು ಜೂನ್ 1 ರಂದು ಪ್ರಕಟವಾಗುವ ಸಾಧ್ಯತೆಯಿದ್ದು, ವಿಷಯವಾರು ಸವಿಸ್ತಾರವಾದ ವೇಳಾಪಟ್ಟಿಯನ್ನು ಮಂಡಳಿಯು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.
ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್. ನೆನಪಿರಲಿ, ಅಂಕಗಳೇ ಜೀವನದ ಅಂತಿಮ ನಿರ್ಧಾರಕವಲ್ಲ. ಫಲಿತಾಂಶ ಏನೇ ಬಂದರೂ ಅದನ್ನು ಧೈರ್ಯವಾಗಿ ಸ್ವೀಕರಿಸಿ. ಒಂದು ವೇಳೆ ಅಂಕ ಕಡಿಮೆಯಾದರೆ ಚಿಂತಿಸುವ ಅಗತ್ಯವಿಲ್ಲ.
ಏಕೆಂದರೆ, ಅಂಕ ಸುಧಾರಿಸಿಕೊಳ್ಳಲು ‘ಪರೀಕ್ಷೆ-2’ ಮತ್ತು ‘ಪರೀಕ್ಷೆ-3’ ರಂತಹ ಅದ್ಭುತ ಅವಕಾಶಗಳು ಈಗ ನಿಮ್ಮ ಮುಂದಿವೆ. ಫಲಿತಾಂಶದ ಸಮಯದಲ್ಲಿ ಪೋಷಕರು ಕೂಡ ಮಕ್ಕಳ ಬೆನ್ನಿಗೆ ನಿಂತು ಧೈರ್ಯ ತುಂಬುವ ಕೆಲಸ ಮಾಡಬೇಕು, ಇತರರೊಂದಿಗೆ ಹೋಲಿಕೆ ಮಾಡಿ ಮಕ್ಕಳ ಮನಸ್ಸನ್ನು ಘಾಸಿಗೊಳಿಸಬಾರದು.
Karnataka Ration Card: ರೇಷನ್ ಕಾರ್ಡ್ ಪಟ್ಟಿಯಿಂದ 21.63 ಲಕ್ಷ ಫಲಾನುಭವಿಗಳು ಹೊರಗೆ?