ರಾಜ್ಯದಲ್ಲಿ ಇಂದಿನಿಂದ ಏಪ್ರಿಲ್ 3 ರವರೆಗೆ ಸತತ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಯಾವ್ಯಾವ ಭಾಗಗಳಲ್ಲಿ ಮಳೆಯಾಗಲಿದೆ? ಈ ದಿಢೀರ್ ಬದಲಾವಣೆಗೆ ಕಾರಣವೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:
ಏಕಾಏಕಿ ಮಳೆಗೆ ಕಾರಣವೇನು? ಉತ್ತರ ಮತ್ತು ದಕ್ಷಿಣ ಒಳನಾಡು ಭಾಗದ ವಾತಾವರಣದಲ್ಲಿ ‘ಟ್ರಫ್’ (ಕಡಿಮೆ ಒತ್ತಡದ ರೇಖೆ) ಹಾಗೂ ದಕ್ಷಿಣ ಒಳನಾಡಿನಲ್ಲಿ ವಾಯುಭಾರ ಕುಸಿತ ಉಂಟಾಗಿದೆ.
ಹವಾಮಾನದಲ್ಲಿನ ಈ ಪ್ರಮುಖ ಬದಲಾವಣೆಗಳೇ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲು ಕಾರಣ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಎಲ್ಲೆಲ್ಲಿ ಮಳೆಯಾಗಲಿದೆ?: ಮುಂದಿನ ಐದು ದಿನಗಳ ಕಾಲ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಈ ವೇಳೆ ಕೆಲವೆಡೆ ಗುಡುಗು ಮತ್ತು ಮಿಂಚು ಕೂಡ ಇರುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?: ಮಳೆ ಬಂದರೂ ಬೆಂಗಳೂರಿಗರಿಗೆ ಬಿಸಿಲಿನ ತಾಪದಿಂದ ಸಂಪೂರ್ಣ ರಿಲೀಫ್ ಸಿಗುವ ಲಕ್ಷಣಗಳಿಲ್ಲ. ರಾಜಧಾನಿಯಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಆದರೆ, “ಮುಂಬರುವ 5 ದಿನಗಳ ಕಾಲ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 35 ರಿಂದ 36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ಅಂದರೆ ಮಳೆಯ ನಡುವೆಯೂ ಬಿಸಿಲಿನ ತಾಪ ಹಾಗೂ ಸೆಕೆ ಮುಂದುವರಿಯಲಿದೆ” ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ, ಈ ಸಮಯದಲ್ಲಿ ಬರುವ ಮಳೆಯು ದಿಢೀರ್ ಗುಡುಗು ಮತ್ತು ಬಿರುಗಾಳಿಯಿಂದ ಕೂಡಿರುವ ಸಾಧ್ಯತೆಗಳಿರುತ್ತವೆ.
ಹೀಗಾಗಿ ಕೆಲಸದ ನಿಮಿತ್ತ ಮನೆಯಿಂದ ಹೊರಡುವಾಗ ಛತ್ರಿ ಇಟ್ಟುಕೊಳ್ಳುವುದು ಹಾಗೂ ಗುಡುಗು ಬರುವಾಗ ಮರಗಳ ಕೆಳಗೆ ಆಶ್ರಯ ಪಡೆಯದಿರುವುದು ಸುರಕ್ಷಿತ.